ನೀ ಕೈ ಬೀಸಿ ಕರೆದರೆ

12:07 AM 0 Comments A+ a-

ನೀ ಕೈ ಬೀಸಿ ಕರೆದರೆ
ಬರುವೆನು ನಾ ಏದುಸಿರು ಬಿಡುತ
ಬರೆದ ಸಾಲಿಗೆ ಸಾಲು ಪೋಣಿಸಿ
ಹಾಡುವೆ ನಾ ಉಸಿರು ಎಳೆದು ಬಿಡುತ
ಕಣ್ಣಂಚಲಿ ಕಲ್ಬುರ್ಗಿಯ ಸುತ್ತಿ
ಕಲ್ಯಾಣದ ಬಸವನ ಪಾದಕ್ಕೆ ವಂದಿಸಿ ,
ಬೆಳಗಾವಿಯ ಕುಂದದ ರಸವುಂಡು
ಗದಗದ ನಾರಾಯಣನ ನಮಿಸಿ
ತುಂಗಭದ್ರೆಯಲಿ ತೇಲಾಡಲು
ಹಂಪಿಯ ವೈಭವದಿ ಮೆರೆಯುತ ,
ಕಿಷ್ಕಿಂದೆಯ ವಿಸ್ಮಯವ ಕಣ್ಣಂಚಲಿ ಸೆರೆ ಹಿಡಿಯುತ
ಪಂಪ ಸರೋವರದಿ ದಣಿವಾರಿಸಿ .
ಧಾರವಾಡದ ಸಿಹಿಯನು ಸವಿ ಸವಿದು
ದಾಂಡೇಲಿಯ ಕಾಳಿಯ ಸ್ಪರ್ಶಿಸಿ
ಅದು ರಭಸವೋ ಸಾವಿನ ಮೊಸಳೆಯೋ
ತಿಳಿಯದೆ ಕಳೆದು ಹೋದ ಪರಿಯಲಿ
ಜೋಗದ ಸಿರಿ ಕಂಡು
ಜಿಗಿ ಜಿಗಿದು ಕುಪ್ಪಳಿಸಿ
ಮನದಾಳದಿಂದ ಬರೆದ
ಪ್ರೀತಿಯ ಹನಿ ಹನಿಗಳು ಇವು.
ಸಾಗರದಾಚೆ ನೋಡುತ
ಸೂರ್ಯನ ಉದಯಕೆ ಕಾಯುತ
ಮರೆಯಾಗುವ ಕ್ಷಣದಿ
ಬೇಸರದಿ ಕಣ್ಣಂಚಲಿ ಹಿಡಿಯುತ
ರಾಯಣ್ಣನ ಕೋಟೆಯಲಿ
ಓಬವ್ವನ ಸ್ಮರಿಸುತ
ಬೆಣ್ಣೆಯ ದೋಸೆಯ
ಕರಗಿದ ರಸಗಳ ಸವಿಯುತ
ಮಲೆನಾಡಿನ ವೈಭವವ
ಚಾರಣದಿ ತುದಿ ಏರಿ
ಹಸಿ ಹಸಿರು ಸಂದೇಶ
ಜೀವ ಜೀವಕೆ ಬೆಸೆಯಲು
ಬೆಂದಕಾಳೂರಿನ ಕೋಟೆಯಲಿ
ಮಾನವನ್ಯಾರೆಂದು ಅರಿಯದೆ
ನಾ ನನ್ನ ಅರಿಯಲು
ಕ್ಷಣ ಕ್ಷಣವೂ ನಿನ್ನ ಸ್ಮರಿಸಲು
ಹೃದಯದ ಕವನವ
ನಿನ್ನ ಚರಣದಿ ಅರ್ಪಿಸಲು
ನೀ ಕೈ ಬೀಸಿ ಕರೆದರೆ
ಬರುವೆನು ಎಂದೆಂದಿಗೂ .
ಕರೆಯದೆ ಹೋದರೂ
ಮನದಲಿ ಕಾಣುವೆ ನಿನ್ನ ಎಂದೆಂದಿಗೂ.
- ಅಲೆಮಾರಿ ಕವಿ