ಅವಳು ತಿಳಿದಂತೆ ನಾನು

11:28 AM 0 Comments A+ a-

 ಈ ಕಥೆ ಬರೆದಿದ್ದು ನನ್ನ ಹುಬ್ಬಳ್ಳಿ ಧಾರವಾಡದ ಸಮಯದಲ್ಲಿ. ನನ್ನ ಬರವಣಿಗೆ ಆ ದಿನದ ನನ್ನ ಯೋಚನಾ ಲಹರಿಯ ಪ್ರೌಢಿಮೆ ಹೇಗಿತ್ತೋ ಹಾಗೆ ಕಥೆಯನ್ನು ಪೋಣಿಸಿದ್ದೆ. ಅದರಲ್ಲಿ ಬರುವ ಕಥಾ ಸನ್ನಿವೇಶ ಪಾತ್ರಗಳನ್ನು ನಿಜವಾದ ಪಾತ್ರಗಳ ಜೊತೆ ಜೋಡಿಸಿದ್ದೆ. ಇದು ಕಾಲ್ಪನಿಕ ಅಂತ ಮಾತ್ರ ಹೇಳಬಲ್ಲೆ. ಈ ಕಥಾ ನಾಯಕ ನಾಯಕನೇ ಅಲ್ಲ. ಅವನೊಂದು ಕಲ್ಪನೆ. ಅವನೊಂದು ಸ್ನೇಹ. ಅವನೊಂದು ಪ್ರೀತಿ. ಅವನೊಂದು ನಿರ್ಲ್ಯಕ್ಷ್ಯ, ಅವನೊಂದು ಅಂಜುಬುರುಕ, ಅವನೊಬ್ಬ ಹಠಮಾರಿ, ಅವನೊಬ್ಬ ಸಮಯ ತನ್ನೊಂದಿಗಿದೆ ಎಂದು ತಿಳಿದಿರುವ ಮೂರ್ಖ, ಇನ್ನೂ ಹಲವಾರು. ಓದಿ ನೀವೇ ಹೇಳಿ ಅವನೇನೆಂದು.

ಹುಬ್ಬಳ್ಳಿಯ ಜನಜಂಗುಳಿ ಇರುವ ಸ್ಥಳ ಅದು. ರೈಲ್ವೆ ನಿಲ್ದಾಣದ ಮುಂದಿನ ರಸ್ತೆ. ಅಲ್ಲೇ ಹತ್ತಿರ ಇರುವ ಮಿಶ್ರ ಚಾಟ್ ಅಲ್ಲಿ ನನ್ನ ಸ್ನೇಹಿತನ ಜೊತೆ ಕಚೋರಿ ತಿಂದು ಮುಗಿಸಿದ್ದೆ. ಧಾರವಾಡಕ್ಕೆ ಹೋಗುವ ಕೊನೆಯ ಬೇಂದ್ರೆ ಬಸ್ ಹತ್ತಿದೆ. ಇನ್ನೂ ರಾಣಿ ಚನ್ನಮ್ಮದಿಂದ ಬರುವ ಪ್ರಯಾಣಿಕರಿಗೆ ಬಸ್ ಕಾಯುತ್ತಾ ಇತ್ತು. ನಾನೋ ಕಿಡಕಿಯಿಂದ ಹೊರಗಡೆ ನೋಡೋದು , ನನ್ನ ಟಾಟಾ ಇಂಡಿಕಾಂ ಮೊಬೈಲ್ನಲ್ಲಿ ಸಮಯ ಎಷ್ಟಾಗಿದೆ ಎಂದು ನೋಡೋದು. ಹೀಗೆ ನೋಡುತ್ತಾ ನೋಡುತ್ತಾ ಏನೋ ಶಬ್ದ. ಏನಾಯ್ತು ಅಂತ ನೋಡಿದರೆ ಯಾರೋ ಹುಡುಗಿ ತನ್ನ ಬ್ಯಾಗನ್ನು ಮೇಲೆ ಬಸ್ಸಲ್ಲಿ ಎತ್ತಿ ಇಡಲು ತಡವರಿಸುತ್ತಿದ್ದಳು. ನಾನೋ ಹೋಗಿ ಬ್ಯಾಗ್ ಎತ್ತಿ ಮುಂದಿನ ಸೀಟ್ ಹತ್ತಿರ ಇಟ್ಟೆ. ಹಾಗೆ ಹುಡುಗಿ ನನ್ನ ನೋಡಿ ಸಿಹಿಯಾದ ಧ್ವನಿಯಲ್ಲಿ ಥ್ಯಾಂಕ್ಸ್ ಹೇಳಿದಾಗ ನಾನು ಅವಳ ಸುಂದರ ಕಣ್ಣ ಒಮ್ಮೆ ನೋಡಿದೆ.ನೋಡುತ್ತಾನೇ ಇರಬೇಕು ಅನ್ನುವಷ್ಟು ಸುಂದರ ಕಣ್ಣುಗಳು. ಏನು ಹೇಳ್ಬೇಕೋ ಅನ್ನುವಷ್ಟು ತಿಳಿಯದೆ ಪರವಾಗಿಲ್ಲ ಅಂತ ಮಾತ್ರ ಹೇಳಿದೆ. 

ಆಗಿನ್ನೂ ಯವ್ವನದ ರೆಕ್ಕೆ ಹಾರಲು ಸಿದ್ಧವಾದಂತೆ ಕಂಡಿತು. ಕಾಲೇಜು ಮುಗಿದು ಕೆಲಸ ಮಾಡುತ್ತಿದ್ದರಿಂದ ಕಾಲೇಜಿನಲ್ಲಿ ಇದ್ದ ಮುಗ್ಧತೆ ಮತ್ತು ಸಂಕೋಚ ಕೊಂಚ ಕಡಿಮೇನೇ ಆಗಿತ್ತು. ನನ್ನ ಯೋಚನಾ ಲಹರಿಗಳೇ ವಿಚಿತ್ರವಾಗಿದ್ದವು. ಇನ್ನೂ ನನ್ನ ನಿಲ್ದಾಣ ಬಂದಾಗ ಕೊಂಚ ತಿರುಗಿ ಅವಳ ಹತ್ರ ನೋಡಿದೆ. ಅವಳಿಗೇನು ಅರೀವಾಗಬೇಕು ನಾನು ಇಲ್ಲೇ ಇಳಿಯುವುದು ಎಂದು. ಗಾಂಧಿನಗರದಲ್ಲಿ ನಾನು ಇಳಿದಾಗ ಎಂತದೋ ಒಂದು ಕಸಿವಿಸಿ. ಕಾಲೇಜಿನಲ್ಲಿ ಇಷ್ಟವಾದ ಹುಡುಗೀಯರೆಲ್ಲ ನನಗಿಂತ ಉದ್ದ ಇದ್ದರು. ಇವಳೋ ನನಿಗಿಂತ ಸ್ವಲ್ಪ ಗಿಡ್ಡ ಇರಬಹುದು. ಎಂತಹ ಸುಂದರ ಕಣ್ಣುಗಳು ಅಂತ ಇನ್ನೊಮ್ಮೆ ಅವಳ ಕಣ್ಣುಗಳನ್ನೇ ನನ್ನ ಮನದ ಒಂದು ಕೋಣೆಯಲ್ಲಿ ಭದ್ರವಾಗಿ ಮುಚ್ಚಿಟ್ಟಿದ್ದೆ. ಸೀದಾ ನಮ್ಮ ಬಾಡಿಗೆ ಮನೆಯ ಹತ್ತಿರ ಹೋದಾಗ ಆಗಲೇ ನನ್ನ ಗೆಳೆಯ ಮಲಿಗಿದ್ದ.

ನಾನು ಮತ್ತು ಕಾಶಿ ಒಂದೇ ಕಂಪನಿಯಲ್ಲಿ ಕೆಲಸ ಮಾಡೋದು. ನಾವು ಕಾಲೇಜಿನಲ್ಲಿ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆವು ಕೂಡ. ಆದಿ, ನಾನು ಮತ್ತು ಕಾಶಿ ಹೀಗೆ ಗೆಳೆತನ ಒಂದು ಕೊಂಡಿ ಇದ್ದಂತೆ. ಆದಿ ಅಂದರೆ ಅದೇ ಕಚೋರಿ ಗೆಳೆಯ. ಅವನ ಅಣ್ಣನೇ ನನ್ನ ಬಾಸ್. ಎಷ್ಟೋ ವಿಷಯದಲ್ಲಿ ಕಾಶಿ ಅಣ್ಣ ಇದ್ದ ಹಾಗೆ. ಜೀವನದಲ್ಲಿ ಎಷ್ಟೋ ವಿಷಯಗಳನ್ನು ಅವನಿಂದ ತಿಳಿದುಕೊಂಡಿದ್ದೆ. ಕಾಶಿ ಮಾತಾಡ್ತಾ ಇದ್ದರೆ ನಿಲ್ಲೋದೇ ಇಲ್ಲ. ಅವನು ನಾನು ಇನ್ನೂ ಚಿಕ್ಕವನು ಮತ್ತು ಹುಡುಗಿಯರ ವಿಷಯದಲ್ಲಿ ಮಾತಿನಲ್ಲಿ ಮಾತ್ರ ಅಂತಾನೇ ಹೇಳುತ್ತಿದ್ದ. ನಾನೋ ಅವನ ಪರಿಚಯದವಳ ಮೇಲೆ ಕವನ ಬರೆದಿದ್ದೆ. ಆ ಹುಡುಗಿ ಇವನನ್ನು ಅಣ್ಣ ಅಂತಾನೆ ಕರೀತಿದ್ದಳು. ಆದರೂ ಅವನಿಗೆ ನನ್ನ ಮೇಲೆ ಒಂದು ರೀತಿಯ ನಂಬಿಕೆ. ನನ್ನ ಪರೀದಿ ಮೀರಿ ಎಂದಿಗೂ ಹೊರಗಡೆ ಹೋಗಲ್ಲ ಅಂತಾನೇ ಅವನು ತಿಳಿದು ಕೊಂಡಿದ್ದ. ಮಾಡಿರುವ ತಪ್ಪನ್ನು ತಿದ್ದುಕೊಳ್ಳುವ ಚಾಕಚಕ್ಯತೆ ಇದೆ ಅಂತಾನೇ ಅವನು ಭಾವಿಸಿದ್ದ. ಆದರೂ ನಾನು ಹುಡುಗೀಯರ ವಿಷಯ ಅವನ ಹತ್ತಿರ ಹೇಳೋದಿಲ್ಲಾಗಿತ್ತು. ಯಾಕಂದ್ರೆ ನನ್ನ ಕಾಲು ಎಳೆಸ್ಕೊಳ್ಳಲು ನಾನು ಸಿದ್ದ ಇಲ್ಲಾಗಿತ್ತು.

ರಾತ್ರಿ ಇಡೀ ಅದೇ ಹುಡುಗಿಯ ಕಣ್ಣುಗಳು. ಬೆಳಗ್ಗೆ ಎದ್ದಾಗ ಎಲ್ಲವೂ ಮರೆತೇ ಹೋಗಿತ್ತು. ಬೆಳಗ್ಗಿನ ಸಮಯ ಒಮ್ಮೊಮ್ಮೆ ಹತ್ತಿರದಲ್ಲೇ ಇದ್ದ ಡಾಬಾದಲ್ಲಿ ಉಪಹಾರ. ಹಾಗೆ ಬೇಂದ್ರೆ ಬಸ್ ಹತ್ತಿ ಪಯಣ. ಒಮ್ಮೊಮ್ಮೆ ಶ್ರೀ ಬೈಕ್ ಅಲ್ಲಿ ಆಫೀಸಿಗೆ ಹೋಗೋದು ರೂಡಿ. ಅಂದು ಇಂದಿನ ಹಾಗೆ ಉಪಹಾರ ಮುಗಿಸಿ ಬೇಂದ್ರೆ ಬಸ್ ಹತ್ತಿದೆ. ಪೆನ್ ಪೇಪರ್ ಹೊರಗಡೆ ಇಟ್ಟು ಏನಾದ್ರೂ ಬರೆಯುವುದು ರೂಡಿ. ಎಸ್.ಡಿ.ಎಂ ಆಯುರ್ವೇದಿಕ್ ಕಾಲೇಜಿನ ಹುಡುಗೀಯರು , ಮೆಡಿಕಲ್ ಕಾಲೇಜಿನ ಹುಡುಗಿಯರು ಹಾಗೆ ಕೊನೆಗೆ ಬಿವಿಬಿ ಮತ್ತಿತರ ಕಾಲೇಜಿನ ಹುಡುಗಿಯರು ನೋಡಲು ನೂರು ಕಣ್ಣು ಸಾಲದು.

ಆಫೀಸಲ್ಲಿ ನನ್ನ ಸೀನಿಯರ್ ಕೆಲಸ ಬಿಟ್ಟು ಬೇರೇನೂ ಮಾತಾಡಲ್ಲ. ಕೋಡಿಂಗ್ ಚನ್ನಾಗಿಯೇ ಗೊತ್ತಿತ್ತು. ಹೊರಗಿನ ಜ್ಞಾನ ಅಷ್ಟಕ್ಕಷ್ಟೇ. ದುಡ್ಡು ತಿಂಗಳಿಗೆ ಸರಿಯಾಗಿ ಬರಬೇಕು. ಇಲ್ಲಾಂದರೆ ಅಂದು ಎಲ್ಲರ ಚಿಂದಿ ಚಿತ್ರಾನ್ನ. ನಾನೋ ಒಂತರಹ ಕುರೀನೇ. ಅದು ಅಂತಿಂತಲ್ಲ ಕುರಿ, ಬಲಿಗೆ ಕರೆದುಕೊಂಡು ಹೋಗುವ ಕುರಿ. ಸ್ನೇಹದ ಚಕ್ರವ್ಯೂಹದಲ್ಲಿ ಸಿಕ್ಕಿ ಏನನ್ನೂ ಹೇಳಲಾರೆ. ತಿಂಗಳಿಗೆ ಸರಿಯಾಗಿ ಸಂಬಳ ಬರೋದಿರಲಿ. ಬಾಡಿಗೆ, ಬಸ್ಸು ಮತ್ತು ಊಟಕ್ಕೆ ಸಿಕ್ಕಿದರೆ ಸಾಕಿತ್ತು. ಆದರೂ ಕಲಿಯಬೇಕೆಂಬ ಹಂಬಲ ನನ್ನನ್ನು ಒಂದು ರೀತಿಯಲ್ಲಿ ತಾಳ್ಮೆಯನ್ನು ಕಲಿಸಿತ್ತು. ಇಷ್ಟರ ನಡುವೆ ಆಫೀಸಿನಲ್ಲಿ ಇದ್ದ ಗೆಳೆಯರ ಜೊತೆ ಊಟದ ಸಮಯ ಮಾತ್ರ ಒಂದು ಮಜಾ. ನನ್ನ ಗುರುಗಳ ಜೊತೆ ಊಟಕ್ಕೆ ಹೋದರೆ ಬರೀ ಕೆಲಸದ ಬಗ್ಗೆನೇ ಮಾತು.

ಹೆಚ್ಚಾಗಿ ಆಫೀಸಿನಿಂದ ಲೇಟ್ ಆಗೇ ಹೋಗೋದು. ಕೆಲಸ ಒಂದು ರೀತಿಯ ಹುಚ್ಚು ತರಹ. ಅವತ್ತೇ ಹೇಗೋ ಬೇಗ ಹೋದೆ. ಮಾಮೂಲು ಬೇಂದ್ರೆ ಬಸ್ ಹತ್ತಿದೆ. ಜಾಗ ಕಾಲಿ ಇಲ್ಲದ್ದರಿಂದ ನಿಂತು ಕೊಂಡು ಹೋದೆ. ಮುಂದಿನ ಯಾವುದೋ ನಿಲ್ದಾಣದಲ್ಲಿ ನಾನು ನಿಂತುಕೊಂಡಿದ್ದ ಜಾಗದ ಪಕ್ಕದಲ್ಲಿ ಕುಳಿತುಕೊಂಡಿದ್ದ ಹೆಂಗಸೊಬ್ಬರು ಇಳಿದರು. ನಾನು ಕಾಲಿ ಜಾಗದ ಪಕ್ಕದಲ್ಲಿ ಹುಡುಗಿ ಇದ್ದದ್ದರಿಂದ ಸುಮ್ಮನೆ ನಿಂತೇ ಇದ್ದೆ. ಆಗ ಯಾರೋ ಕರೆದಂತೆ ಆಗಿ ತಿರುಗಿದೆ. ಆ ಹುಡುಗಿ ಬೇರೆ ಯಾರೂ ಅಲ್ಲ ಅದೇ ಬ್ಯಾಗ್ ಹುಡುಗಿ. ಮತ್ತೆ ಅದೇ ಕಣ್ಣು. ಅವರ ನಗುನೂ ನೋಡಿದೆ. ಎಂತಹ ನಗು! ಅಲ್ಲೇ ಬಿದ್ದು ಬೀಳುವುದೊಂದೇ ಬಾಕಿ. 

ಹಾಗೆ ನಾಚುತ್ತ ನಾನು ಅವಳ ಪಕ್ಕದಲ್ಲಿ ಕುಳಿತೆ. ಧಾರವಾಡ ಬರೋದು ತುಂಬಾ ಹೊತ್ತಿದೆ. ಏನು ಮಾತಾಡೋದು ಅಂತ ತಿಳಿಯದು. ಈ ಸಂಜೆ ತುಂಬಾ ದೊಡ್ಡ ಸಂಜೆಯಾದಂತೆ ಕಂಡಿತು. ಎಂತಹ ಹುಚ್ಚ ನಾನು ಥ್ಯಾಂಕ್ಸ್ ಕೂಡ ಹೇಳಲಿಲ್ಲ. ತುಂಬಾ ಥ್ಯಾಂಕ್ಸ್ ಅಂತ ಅವಳನ್ನು ನೋಡಿದೆ. ಮತ್ತದೇ ಕಿರು ನಗೆ. ಆ ಕಣ್ಣುಗಳನ್ನು ನೋಡಲಾಗದೆ ಕಣ್ಣು ಅತ್ತಿತ್ತ ಓಡಲಾರಂಭಿಸಿತು. ಆಗ ಅವರ ಮೃದು ಧ್ವನಿಯಲ್ಲಿ ಕೇಳಿದಳು, ಎಲ್ಲಿ ಕೆಲಸ ಮಾಡುವುದು ನೀವು. ಅಲ್ಲಿಂದ ಶುರುವಾಯಿತು ನೋಡಿ ಮಾತುಕತೆ.  ನಾನು ದುಷ್ಯಂತ ಮತ್ತು ಅವಳು ಶಕುಂತಲೆ, ಬಸ್ಸಿನಲ್ಲಿ ಇರುವವರೆಲ್ಲ ಗಂಧರ್ವ  ಲೋಕದವರು. 


ಮುಂದುವರೆಯುವುದು..........................